ಬಿಜೆಪಿಯ (BJP) ಚುನಾವಣಾ ಪ್ರಣಾಳಿಕೆ ಎಲ್ಲಾ ಚುನಾವಣಾ ಗಿಮಿಕ್. ಮೂರುವರೆ ವರ್ಷ ಆಡಳಿತ ಮಾಡಿದ್ದಾರೆ. ಈ ಎಲ್ಲಾ ಕಾರ್ಯಕ್ರಮ ತರೋಕೆ ಅವಕಾಶ ಇತ್ತಲ್ವಾ? ಆಗ ಯಾಕೆ ತರಲಿಲ್ಲ? ಹಾಲು ಕೊಡೋದು ಆಗಲೇ ಮಾಡಬಹುದಿತ್ತಲ್ವಾ? ಉಚಿತ ಘೋಷಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಿನಾ ಜಾಗಟೆ ಹೊಡೆಯುತ್ತಿದ್ದರು. ಫ್ರೀ ಕೊಡಬಾರದು ಅಂತ ಮೋದಿನೇ ಹೇಳುತ್ತಿದ್ದರು. ಈಗ ಅವರಿಗೆ ಘೋಷಣೆ ಮಾಡಲು ಅನುಮತಿ ಯಾರು ಕೊಟ್ರು? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಿಜೆಪಿಗೆ ಸವಾಲು ಹಾಕಿದ್ದಾರೆ.
ಯಾದಗಿರಿ (Yadgiri) ಜಿಲ್ಲೆಯ ಶಹಾಪುರ ನಗರದಲ್ಲಿ ಮಾತನಾಡಿದ ಹೆಚ್ಡಿಕೆ, ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ಡೂಪ್ಲಿಕೇಟ್ ಅಂತ ಚರ್ಚೆ ಮಾಡುತ್ತಿದ್ದರು. ಹಾಗಿದ್ದರೆ ಇವರದ್ದು ಏನು? ಮೂರುವರೆ ವರ್ಷ ಅಧಿಕಾರದಲ್ಲಿದ್ರು. ಗ್ಯಾಸ್ ಬೆಲೆ ಹೆಚ್ಚಾಗಿದೆ. ಅವಾಗ ಯಾಕೆ ಕಮ್ಮಿ ಮಾಡಲಿಲ್ಲ? ಮೂರುವರೆ ವರ್ಷದಲ್ಲಿ ಹಣ ಲೂಟಿ ಮಾಡೋದು ಬಿಟ್ಟು ಜನಸಾಮಾನ್ಯರ ಬಗ್ಗೆ ನೋಡಲಿಲ್ಲ. ಬರೀ ಜನರ ಜೊತೆ ಚೆಲ್ಲಾಟವಾಡಿದರು. ಈಗ 2 ರಾಷ್ಟ್ರೀಯ ಪಕ್ಷಗಳ ಘೋಷಣೆಗಳ ಬಗ್ಗೆ ಜನರಲ್ಲಿ ಭ್ರಮನಿರಸನವಿದೆ ಎಂದರು.