ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಲಖನೌ ಸೂಪರ್ ಜಯಂಟ್ಸ್ ನಾಯಕ ಕೆ.ಎಲ್ ರಾಹುಲ್ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮುಂದಿನ ಕೆಲ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆಂದು ವರದಿಯಾಗಿದೆ. ಆ ಮೂಲಕ ಮುಂದಿನ ಕೆಲ ಪಂದ್ಯಗಳಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಸ್ಪಿನ್ ಆಲ್ರೌಂಡರ್ ಕೃಣಾಲ್ ಪಾಂಡ್ಯ ಮುನ್ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.
ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯುವ ಪ್ರಯತ್ನದಲ್ಲಿ ಕೆ.ಎಲ್ ರಾಹುಲ್ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ನೋವು ತಾಳಲಾರದೆ ಅವರು, ತಮ್ಮ ತಂಡದ ಸಹಾಯಕ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು. ಇದಾದ ಬಳಿಕ ಅವರು ಫೀಲ್ಡಿಂಗ್ಗೆ ಮರಳಲೇ ಇಲ್ಲ.